👇👇👇👇👇👇👇👇👇👇👇👇👇ರೈತ ದಿನಾಚರಣೆ
https://youtube.com/shorts/EGX4c_IVzY8?si=erkB19_6MH0KmBG6
ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳಿ ಎಂದರು. ಇತ್ತೀಚಿನ ಯುವ ಪೀಳಿಗೆಯ ಸಮಾಜವು ಆಧುನೀಕರಣ ಹೊಂದುತ್ತಾ ಹೋದಂತೆ ಆರೋಗ್ಯ ಸಮಸ್ಯೆಗಳು ಕೂಡಾ ಹೆಚ್ಚುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸಿ ಬೆಳೆದ ಬೆಳೆಗಳು. ಇವು ಆ ಕ್ಷಣಕ್ಕೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಲಾಭ ಕೊಡಬಹುದು ಆದರೆ ಮುಂದೆ ಕ್ರಮೇಣವಾಗಿ ಈ ರಾಸಾಯನಿಕ ಗೊಬ್ಬರಗಳು ಸಂಪೂರ್ಣವಾಗಿ ಮಣ್ಣಿನ ಫಲವತ್ತತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ನಿಮ್ಮ ತೋಟ ಅಥವಾ ಮನೆಯ ಆವರಣದಲ್ಲಿ ಸಾವಯವ ಗೊಬ್ಬರವನ್ನು ಬಳಸಿ ಸಣ್ಣ ತರಕಾರಿ, ಹಣ್ಣುಗಳನ್ನು ಬೆಳೆದು ಉಪಯೋಗಿಸುವುದರಿಂದ ದೇಹದ ಪೌಷ್ಟಿಕತೆ ಮತ್ತು ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ ಎಂದು ನೆರೆದಿದ್ದವರಿಗೆ ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಉಪಸ್ಥಿತರಾಗಿದ್ದ ಸಂಸ್ಥೆಯ ಎ.ಐ.ಸಿ.ಟಿ.ಇ. ಸಂಯೋಜಕರು ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರಾಜಣ್ಣ ಎಸ್., ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿಜಯ್ ಕುಮಾರ್ ಎಸ್. ಮತ್ತು ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು ರೈತರಾದ ಶ್ರೀಯುತ ರವಿಶಂಕರ್ ಅವರನ್ನು ಸನ್ಮಾನಿಸಿದರು. ಇನ್ನು ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಶ್ರೀಯುತ ಗುರುಬಸವಣ್ಣ ಎಂ.ಜಿ., ಶ್ರೀಯುತ ಚವ್ಹಾಣ್ ರವಿಶಂಕರ್, ಡಾ. ವಿನಯ್ ಎಸ್.ಎಸ್., ಶ್ರೀಯುತ ಕೃಷ್ಣಾನಂದ ಎಲ್., ಶ್ರೀಯುತ ಶ್ರೀಹರ್ಷ ಎ.ಎಂ. ಮತ್ತು ಎಲ್ಲಾ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೃಪೆ :-ಕೆ ಎಂ ವೀರಭದ್ರಸ್ವಾಮಿ
ಉಪನ್ಯಾಸಕರು ಮತ್ತು ಎನ್ಎಸ್ಎಸ್ ಅಧಿಕಾರಿಗಳು.
ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info