#ವಿಮರ್ಶಾ -ದಿನ ಸುದ್ದಿ
ವಿಮರ್ಶಾ -vimarsha
ಬಸ್ ಪಾಸ್ ನವೀಕರಣಕ್ಕೆ ಅರ್ಜಿ ಆಹ್ವಾನ
ಹಾಸನ .
( ಕರ್ನಾಟಕ ವಾರ್ತೆ):-
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 06 ಸೇವೆಗಳನ್ನು (ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸ್ ವಿಕಲಚೇತನರ ರಿಯಾಯಿತಿ ಬಸ್ಪಾಸ್, ಅಂಧರ ಉಚಿತ ಬಸ್ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಬಸ್ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್ ಪಡೆಯಲು ಮತ್ತು ಅಪಘಾತ ಪರಿಹಾರ ನಿಧಿಗಾಗಿ) ಸೇವಾಸಿಂಧು ಪೋರ್ಟಲ್ನಲ್ಲಿ ಕಡ್ಡಾಯವಾಗಿ ಆನ್ಲೈನ್ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ.
ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ವಿತರಣೆ ಮಾಡಬೇಕಾಗಿರುವುದರಿಂದ ಫಲಾನುಭವಿಗಳು ನವೀಕರಿಸಿಕೊಳ್ಳಲು ಮತ್ತು ಹೊಸ ಬಸ್ಪಾಸ್ಗಳನ್ನು ಪಡೆದುಕೊಳ್ಳಲು ಸೇವಾಸಿಂದು https://serviceonline.gov.in/karnataka ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಸದರಿ ವಿಕಲಚೇತನ ಫಲಾನುಭವಿಗಳು ಫೆ.28ರ ಒಳಗಾಗಿ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಫೆ 28ರ ನಂತರ ವಿಕಲಚೇತನರ ಬಸ್ಪಾಸ್ ನವೀಕರಣಕ್ಕೆ ಅವಕಾಶ ಇರುವುದಿಲ್ಲ. ಆನ್ಲೈನ್ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ವಿಕಲಚೇತನರ ಗುರುತಿನ ಚೀಟಿ ಅಥವಾ
ಯು.ಜಿ.ಐ.ಡಿ.ಕಾರ್ಡ್ ಮತದಾರರ ಚೀಟಿ/ಆಧಾರ್ ಕಾರ್ಡ್/ರೇಷನ್ ಕಾರ್ಡ್, ಇತ್ತೀಚಿನ ಭಾವ ಚಿತ್ರ ಅಫ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.
ಫಲಾನುಭವಿಗಳು ಆನ್ಲೈನ್ ಮುಖಾಂತರ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ್ದಾಗ್ಯೂ, ಭೌತಿಕವಾಗಿ ಬಸ್ಪಾಸ್ ಪಡೆಯಲು ಬಂದಾಗ ಅಗತ್ಯ ದಾಖಲಾತಿಗಳು ಮತ್ತು ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ, ವಿಕಲಚೇತನರ (ಹೊಸ/ನವೀಕರಣ) ಬಸ್ಪಾಸ್ಗಳನ್ನು ಪಡೆಯುವಂತೆ ಎಂದು ಕ.ರಾ.ರ.ಸಾ.ನಿಗಮ ಚಿಕ್ಕಮಗಳೂರು ವಿಭಾಗದ ವಿಭಾಗೀಯನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
******************************************
ಕೊಳಚೆ ಪ್ರದೇಶದ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಿ: ಶಾಸಕರ ಸೂಚನೆ.
ಹಾಸನ
(ಕರ್ನಾಟಕ ವಾರ್ತೆ):-
ನಗರದ ಜಿಲ್ಲಾ ಬಂದಿಖಾನೆ ಹಿಂಭಾಗ ಇರುವ ಕೊಳಚೆ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ಒದಗಿಸಿ ಎಂದು ಶಾಸಕರಾದ ಪ್ರೀತಂ ಜೆ ಗೌಡ ತಿಳಿಸಿದ್ದಾರೆ
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೊಳಚೆ ನಿರ್ಮೂಲನ ಮಂಡಳಿ ನೀಡುವ ಹಕ್ಕುಪತ್ರಗಳನ್ನು ನೊಂದಣಿ ಮಾಡಿಸಿ ಸರ್ಕಾರ ನೆರವು ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಅವಕಾಶ ಕಲ್ಪಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಬರುವ ಅನುದಾನ ಫಲಾನುಭವಿ ವಂತಿಕೆ ಹೊರತುಪಡಿಸಿ ಉಳಿದ ಹಣವನ್ನು ಸಾಲದ ರೂಪದಲ್ಲಿ ಒದಗಿಸಲು ಎಲ್ಲಾ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್, ಉಪವಿಭಾಗಧಿಕಾರಿ ಬಿ.ಎ. ಜಗದೀಶ್, ನಗರ ಆಯುಕ್ತರಾದ ಕೃಷ್ಣಮೂರ್ತಿ, ಭೂದಾಖಲೆಗಳ ಉಪ ನಿರ್ದೇಶಕರಾದ ಹೇಮಲತಾ ಎಂ.ಡಿ, ಎ.ಜಿ.ಎಂ ಜಗದೀಶ್ ಹಾಗೂ ಮತ್ತಿತರರು ಹಾಜರಿದ್ದರು.
*******************************************
ವಸತಿ ನಿಲಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ನೋಂದಣಿ
ಹಾಸನ .
(ಕರ್ನಾಟಕ ವಾರ್ತೆ):-
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಡೇಟಾ ಸಂಗ್ರಹ ಮಾಡಲು ಹೆಚ್.ಎಂ.ಐ.ಎಸ್. ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಇಲಾಖಾ ವಿದ್ಯಾರ್ಥಿ ನಿಲಯಗಳು, ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯಗಳು /ಸರ್ಕಾರಿ/ ವಿಶ್ವವಿದ್ಯಾನಿಲಯ /ಸರ್ಕಾರಿ ಕಾಲೇಜು/ಸರ್ಕಾರಿ ಸ್ವಾಯತ್ತ ಕಾಲೇಜುಗಳ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳು, ಖಾಸಗಿ ವಿಶ್ವವಿದ್ಯಾನಿಲಯ, ಖಾಸಗಿ ಕಾಲೇಜು/ಖಾಸಗಿ ಸ್ವಾಯತ್ತ ಕಾಲೇಜುಗಳ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳನ್ನು ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ನಿರ್ದೇಶಕರು ಒದಗಿಸಲಾದ ಲಾಗಿನ್ ಮೂಲಕ ಹೊಸದಾಗಿ ಹಾಸ್ಟೆಲ್ ನೋಂದಣಿ ಮಾಡಬೇಕಾಗಿರುತ್ತದೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
******************************************
ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಹಾಸನ
(ಕರ್ನಾಟಕ ವಾರ್ತೆ):
- ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಾಸನ ವತಿಯಿಂದ 2020-21 ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಅಯವ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡುವ ಯೋಜನೆಯಡಿ ಜಿಲ್ಲಾ ಕಚೇರಿಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕಂಪ್ಯೂಟರ್ ಜ್ಞಾನವಿರುವ ಅದರಲ್ಲೂ ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರುವ ಇಬ್ಬರು ಮಹಿಳಾ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಕಚೇರಿ ಕ್ಷೆತ್ರಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಪ್ರೆಂಟೀಸ್ ತರಬೇತಿಯ ಅವಧಿ 10 ತಿಂಗಳಾಗಿದ್ದು ಫೆಬ್ರವರಿ 2021 ರಿಂದ ನವೆಂಬರ್ 2021ರವರೆಗೆ ಇರುತ್ತದೆ. ಪ್ರತಿ ಮಾಹೆ ಒಬ್ಬ ಮಹಿಳಾ ಅಭ್ಯರ್ಥಿಗೆ ರೂ.15 ಸಾವಿರ ಸಂಭಾವನೆ ನೀಡಲಾಗುತ್ತದೆ. ಆಯಾ ಜಿಲ್ಲೆಯ ಮಹಿಳಾ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು, ಜಿಲ್ಲೆಯಲ್ಲಿ ಅರ್ಹ ಅಭ್ಯರ್ಥಿಗಳು ಸಿಗದಿದ್ದಲ್ಲಿ ಅಕ್ಕ ಪಕ್ಕದ ಜಿಲ್ಲೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ವಯೋಮಿತಿ 40 ವರ್ಷ ದಾಟಿರಬಾರದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ 08172-295208 ಯನ್ನು ಸಂಪರ್ಕಿಸಬಹುದಾಗಿದೆ.
******************************************
ಆಲೂಗೆಡ್ಡೆ ಬೆಳೆ ಕ್ಷೇತ್ರೋತ್ಸವ
ಹಾಸನ
(ಕರ್ನಾಟಕ ವಾರ್ತೆ):-
ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿಕಾವಲು, ಹಾಸನದ ರಾಷ್ಟ್ರೀಯ ಕೃಷಿ ವಿಕಾಸಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಲ್ಲಿ ಅಂಗಾಂಶ ಕೃಷಿ ಕುಡಿ ಕಾಂಡ ಸಸಿಗಳಿಂದ ಆಲೂಗಡ್ಡೆ ಉತ್ಪಾದನೆ ವಿಷಯದ ಕುರಿತು ತೋಟಗಾರಿಕೆ ಇಲಾಖೆ, ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವವನ್ನು ಜ.19 ರಂದು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಮೇಲ್ಪಟ್ಟು ಆಲೂಗಡ್ಡೆ ಬೆಳೆಗಾರರು ಮತ್ತು ನರ್ಸರಿ ಉತ್ಪಾದಕರು ಕ್ಷೇತ್ರೋತ್ಸವವನ್ನು ವೀಕ್ಷಿಸಿ ಹೊಸ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯ ಉಪಯೋಗ ಪಡೆದರು.
ಈ ಕ್ಷೇತ್ರೋತ್ಸವದಲ್ಲಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಡಾ. ಹೆಚ್. ಅಮರನಂಜುಂಡೇಶ್ವರವರು ಪ್ರಾಸ್ಥಾವಿಕ ಭಾಷಣ ಮಾಡಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಸಂಶೋಧನಾ ನಿರ್ದೇಶಕರಾದ ಡಾ. ಡಿ. ಆರ್. ಪಾಟೀಲ್ರವರು ಅಧ್ಯಕ್ಷತೆ ವಹಿಸಿ ಡಾ. ವೈ. ಕೆ. ಕೋಟಿಕಲ್, ವಿಸ್ತರಣಾ ನಿರ್ದೇಶಕರು ಉದ್ಗಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರು ಡಾ. ಎನ್. ದೇವಕುಮಾರ, ತೋಟಗಾರಿಕೆ ಉಪನಿರ್ದೇಶಕ ಹೆಚ್. ಆರ್. ಯೋಗೇಶ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು ಪ್ರಾಧ್ಯಾಪಕರಾದ ಡಾ. ಪಿ. ಎಮ್. ಮುನಿಕೃಷ್ಣಪ್ಪ ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕಂದಲಿಯ ಮುಖ್ಯಸ್ಥರು ಡಾ. ರಾಜೇಗೌಡ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಡಾ. ಕಿರಣಕುಮಾರ್. ಕೆ. ಸಿ., ಅಂತರರಾಷ್ಟ್ರೀಯ ಆಲೂಗಡ್ಡೆ ಸಂಸ್ಥೆ, ಬೆಂಗಳೂರು ರವೀಂಧ್ರನಾಥ ರೆಡ್ಡಿ, ಕೃಷಿ ಸಂಶೋಧನಾ ಕೇಂದ್ರ, ಗುಂಜೇವು ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ. ಎಮ್. ಎಸ್. ನಾಗರಾಜ್, ಗ್ರೀನ್ ಇನೋವೇಶನ್ ಸೆಂಟರ್, ಬೆಂಗಳೂರ. ಸುಹಾಸ್ ಹಾಗೂ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಗಳು ಬಾಗವಹಿಸಿದ್ದರು.
*****************************************
ಜಿಲ್ಲೆಯಲ್ಲಿಂದು ಹೊಸದಾಗಿ 10 ಕೋವಿಡ್ ಪ್ರಕರಣಗಳು ಪತ್ತೆ
ಹಾಸನ.
(ಕರ್ನಾಟಕ ವಾರ್ತೆ):-
ಜಿಲ್ಲೆಯಲ್ಲಿಂದು ಹೊಸದಾಗಿ 10 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 28,352 ಏರಿಕೆಯಾಗಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ 66 ಮಂದಿ ಸಕ್ರಿಯ ಸೋಂಕಿತರು ಮಾತ್ರ ಹಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ 27,821 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೋವಿಡ್ನಿಂದ ಯಾವುದೇ ಸಾವು ಸಂಭವಿಸಿಲ್ಲ ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 465 ಮಂದಿ ಸಾವನ್ನಪ್ಪಿದಾರೆ.
ಇಂದು ಪತ್ತೆಯಾದ 10 ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ 7 ಮಂದಿಗೆ, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ತಲಾ ಒಬ್ಬರಿಗೆ ಕೋವಿಡ್ ದೃಡ ಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.
******************************************
ಪ್ರಧಾನ ಸಂಪಾದಕರು :-
ಹರೀಶ್ ಹೆಚ್ ಆರ್
(ಕೋಟೆ )
ಸುದ್ದಿ ಸಂಪಾದಕರು :-
ನಾಗೇಂದ್ರ.ಹೆಚ್. ಎನ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info