ಕೋಟೆ ಕಾಲಂ:-
ಗ್ರಾಮ ಪಂಚಾಯತಿ ಕದನ.
-ಹರೀಶ್ ಹೆಚ್ ಆರ್
ಕೋಟೆ.
ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ.....
ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು
ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು
ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ
ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ,
ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ
ಈ ಬಾರೀ ಕರೋನಾ ಪಿಡುಗಿನಿಂದ ತತ್ತರಿಸಿ ಊರಿಗೆ ವಾಪಾಸಾಗಿ ಕೆಲಸವಿಲ್ಲದೆ ದಿನ ದೂಡುತ್ತಿರುವವರ ಸಂಖ್ಯೆ ಪ್ರತಿ ಗ್ರಾಮಗಳಲ್ಲಿಯೂ ಹೆಚ್ಚಾಗಿದ್ದು ಇದು ಪಂಚಾಯತಿ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರಲಿದೆಯಲ್ಲದೆ ತೋಳ್ಬಲ ಪ್ರದರ್ಶನ ಹಾಗೂ ಹೊಡಿಬಡಿ ಘಟನೆಗಳು ಹೆಚ್ಚಲು ಕಾರಣವಾಗಲಿದೆ
ಚುನಾವಣೆ ನಾಮಪತ್ರಸಲ್ಲಿಕೆ ದಿನದಿಂದ ಆರಂಭವಾಗುವ ಬಿಗುವಿನ ವಾತಾವರಣ ಬಹುತೇಕ ಮುಂದಿನ ಐದು ವರ್ಷಗಳ ಕಾಲವೂ ಆಗಾಗ್ಗೆ ಮರುಕಳಿಸಲಿದೆಯಲ್ಲದೆ ಜನರ ನಡುವೆ ಶಾಶ್ವತವಾಗಿ ದ್ವೇಷದ ಗೋಡೆ ಎಬ್ಬಿಸಲಿದೆ
ಈ ಚುನಾವಣೆ ಗ್ರಾಸ್ ರೂಟ್ ಲೆವೆಲ್ನಲ್ಲಿ ಪಕ್ಷಗಳನ್ನು ಬಲಿಷ್ಠಗೊಳಿಸಲು ರಾಜಕೀಯ ಪಕ್ಷಗಳಿಗೆ ಸದವಕಾಶ
ಸಾಮಾನ್ಯವಾಗಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅತಿಹೆಚ್ಚು ಸರಾಸರಿ ಮತದಾನವಾಗುವುದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಪಟ್ಟಣ ಪ್ರದೇಶ ಕ್ಕೆ ಹೋಲಿಸಿದರೆ ಗ್ರಾಮಾಂತರದಲ್ಲಿ ಮತದಾನದ ಪ್ರಮಾಣ ಹೆಚ್ಚು ಜೊತೆಗೆ ಗ್ರಾಮಾಂತರ ಮತಗಳು ಒಮ್ಮೆ ಒಲಿದರೆ ಅವುಗಳನ್ನು ಭದ್ರವಾಗಿ ಕಾಪಾಡೊಕೊಳ್ಳಬಹುದು
ಈ ಎಲ್ಲಾ ಹಿನ್ನಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ಗ್ರಾಮಪಂಚಾಯತಿ ಗಳಲ್ಲಿ ತಮ್ಮ ಹಿಂಬಾಲಕ ರನ್ನು ಗೆಲ್ಲಿಸಲು ಹಣದ ಹೊಳೆಯನ್ನೇ ಹರಿಸಲು ಸಜ್ಜಾಗಿವೆ
ಇನ್ನೂ ಮೊದಲೇ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಇಡೀ ಸಮಾಜಕ್ಕೆ ಜಾತಿಯ ಹೊಲಸನ್ನು ಮೆತ್ತಿ ಜನರ ನಡುವೆ ಅಪನಂಬಿಕೆಯ ಕಂದಕ ಸೃಷ್ಟಿ ಮಾಡಿದ್ದಾರೆ ಆ ಕಂದಕ ಈ ಚುನಾವಣೆಯಲ್ಲಿ ಇನ್ನಿಲ್ಲದಂತೆ ದೊಡ್ಡದಾಗುವುದಲ್ಲದೆ ಹಳ್ಳಿಗಳಲ್ಲಿನ ಸಾಮರಸ್ಯವನ್ನೇ ಹಾಳುಮಾಡಲಿದೆ
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಹಳ್ಳಿಗಳಲ್ಲಿ ಹಿರಿಯರು ಎನ್ನುವವರ ಮಾತು ನಡೆಯುವುದು ಅಷ್ಟಕ್ಕಷ್ಟೆ ಪಡ್ಡೆಹುಡುಗರದ್ದೇ ಆಟಾಟೋಪಾ ರಾಜಕಾರಣಿಗಳು ಸಹ ವಯಸ್ಸಾದವರದ್ದು ನಡೆಯುವುದಿಲ್ಲ ಎಂಬುದನ್ನು ಮನಗಂಡಿರುವ ಕಾರಣ ಪಡ್ಡೆಗಳಿಗೆ ಮಣೆ ಹಾಕುತ್ತಿದ್ದು ಪ್ರತಿನಿತ್ಯ ಗುಂಡುತುಂಡಿನ ಸಮಾರಾದನೆ ನಡೆಯಲೇ ಬೇಕು ಕುಡಿದ ಮೇಲೆ ಕುಡಿಸಿದವನಿಗೆ ನಿಷ್ಠೆ ತೋರಲು ಹೊಡೆದಾಡಲೇಬೇಕು ಎನ್ನುವ ಪರಿಸ್ಥಿತಿ ಈಭಾರಿ ನಿರ್ಮಾಣವಾಗಲಿದೆ
ಮಹಿಳಾ ಮೀಸಲಾತಿಯ ಭರಪೂರ ದುರುಪಯೋಗವಾಗಲಿದ್ದು ಪ್ರಭಾವ ಹೊಂದಿರುವವನು ಪತ್ನಿ ಇಲ್ಲವೇ ತಾಯಿ ಅಥವಾ ಸಹೋದರಿಯನ್ನು ನಿಲ್ಲಿಸಿ ಗೆಲ್ಲಿಸುವ ಹಾಗೂ ಅವರು ನೆಪಮಾತ್ರಕ್ಕೆಂಬಂತೆ ಗಂಡಸರೇ ಆಡಳಿತ ನಡೆಸುವುದು ಮುಂದುವರೆಯಲಿದೆ ದೇವರ ದಯದಿಂದ ಸದಸ್ಯಣಿಯರ ಗಂಡ/ತಂದೆ ಅಥವಾ ಸಹೋದರ ಸಭೆ ಸಮಾರಂಭ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗುವ ಪ್ರಹಸನ ನಡೆಯದಿದ್ದರೆ ಸಾಕು ಅಧಿಕಾರ ವಿಕೇಂದ್ರೀಕರಣದ ಮಾನ ಉಳಿಯುತ್ತದೆ
ಹಣ ಕೋಳಿ ಪ್ರತಿನಿತ್ಯ ಮದ್ಯದ ಸರಬರಾಜು ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ನಾಕಾಣೆ ಗಿಟ್ಟದೆ ಮಖ ಒಣಗಿಸಿಕೊಂಡ ಮಂದಿ ಹಲವರಾದರೆ ತಮಗೆ ಯಾರು ಮತ ಹಾಕಿಲ್ಲ ಎಂಬುದನ್ನು ಸುಲಭವಾಗಿ ಗುರುತಿಸಿಕೊಂಡು ಅವರೊಂದಿಗೆ ವರ್ಷಗಳ ಕಾಲ ದ್ವೇಷ ಸಾಧಿಸಿ ಅವರಿಗೆ ಕೊಟ್ಟಿಗೆ ಶೌಚಾಲಯ ಮಂಜೂರಾಗದಂತೆ ತಡೆದು ಸಮಾಧಾನ ಪಟ್ಟುಕೊಳ್ಳುವವರು ಹಲವಾರು,
ಗ್ರಾಮಾಂತರ ಪ್ರದೇಶಗಳಲ್ಲಿ ಈಗಂತೂ ಮದ್ಯಪ್ರಿಯರ ಸಂಖ್ಯೆ ಅಧಿಕವಾಗಿದೆ ಚುನಾವಣೆ ಸಮಯದಲ್ಲಿ ಪುಗಸಟ್ಟೆ ಸಿಗುವಾಗ ಬಿಡುತ್ತಾರೆಯೇ ವರುಷವಿಡೀ ಚೀಪರ್ ಕುಡಿಯುವವನು ಸಹ ದುಬಾರಿ ಮದ್ಯಕ್ಕೆ ದುಂಬಾಲು ಬೀಳುತ್ತಾನೆ
ಇಂದಿನ ಮದ್ಯದ ದುಬಾರಿ ಬೆಲೆಯಲ್ಲಿ ಒಳ್ಳೆಯ ಬ್ರಾಂಡ್ ಹಂಚಲು ಸಾಕಷ್ಟು ಹಣ ವ್ಯಯ ಮಾಡಬೇಕಾದ ಹಿನ್ನಲೆಯಲ್ಲಿ ರಾಜಕೀಯ ಮುಖಂಡರು ನಕಲಿ ಮದ್ಯ ತಯಾರಕರ ಮೊರೆ ಹೋಗಲಿದ್ದು ದುಬಾರಿ ಮದ್ಯದ ಬಾಟಲಿಯಲ್ಲಿ ಲೋಕಲ್ ಸರಕು ತುಂಬಿ ಹೊಟ್ಟೆತುಂಬ ಕುಡಿಸಲಿದ್ದು ನಕಲಿ ಮದ್ಯ ಕುಡಿದು ಒಂದಷ್ಟು ಜನ ಶಿವನ ಪಾದ ಸೇರಲಿದ್ದಾರೆ
ಗ್ರಾಮ ಪಂಚಾಯತಿ ಚುನಾವಣೆಯ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಗಾದಿಯ ಮೀಸಲಾತಿ ಪ್ರಹಸನ ಆ ನಂತರ ಸದಸ್ಯರ ಕಿಡ್ನಾಪ್ ಪ್ರವಾಸ ಹಣದ ಆಮಿಷ ಆಗೊಂದಷ್ಟು ಹೊಡೆದಾಟ ಬಡಿದಾಟ
ಒಟ್ಟಾರೆಯಾಗಿ ಗ್ರಾಮಾಂತರ ಪ್ರದೇಶದಲ್ಲಿ ಸ್ವಾಸ್ಥ್ಯ ಕದಡಲು ಏನೇನು ಮಾಡಬೇಕೋ ಎಲ್ಲವೂ ಗ್ರಾಮ ಪಂಚಾಯತಿ ಚುನಾವಣೆ ಹೆಸರಿನಲ್ಲಿ ನಡೆಯಲಿದೆ.
#ಗ್ರಾಮ ಪಂಚಾಯಿತಿ
#ಚುನಾವಣೆ
#ಕರ್ನಾಟಕ
#ವಿಮರ್ಶಾ-vimarsha
An digital media
ಪ್ರಧಾನ ಸಂಪಾದಕರು
ಹರೀಶ್ ಹೆಚ್ ಆರ್ ಕೋಟೆ
ಸುದ್ದಿ ಸಂಪಾದಕರು
ನಾಗೇಂದ್ರ.ಹೆಚ್. ಎನ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info