ಶಾಲು ಕೊಡವಿ ಎದ್ದು..... ಹೋದೆಯಲ್ಲೋ..-ಕೋಟೆ ಕಾಲಂ.
ಸಿಕ್ಕಿದಾಗಲೆಲ್ಲಾ ಮೊದಲು ಜಗಳವೇ ಅದಕ್ಕೆ ಕಾರಣವಾಗಲೀ ಇಂತದ್ದೆ ನಿರ್ದಿಷ್ಟ ವಿಚಾರವಾಗಲಿ ಬೇಕೆಂದಿಲ್ಲಾ..
ಒಟ್ಟಾರೆ ಜಗಳವಾಡಿಕೊಂಡೆ ಮಾತಿಗೆ ಶುರುವಿಟ್ಟರೆ ಅರ್ಧ ಗಂಟೆ ಇಬ್ಬರು ಆ ಜಾಗಬಿಟ್ಟು ಕದಲುತ್ತಿರಲಿಲ್ಲ ನಡುವೆ ಅವನಿಗೆ ಪ್ರೀತಿಪಾತ್ರನಾದ ನನ್ನ ಮಗ ಮಯೂರನ ಬಗ್ಗೆ ವಿಚಾರಿಸುವುದನ್ನು ಮರೆಯುತ್ತಿರಲಿಲ್ಲ
ಕೊಟ್ಟೂರು ಶ್ರಿನಿವಾಸ ಎಂದರೇ ಮೆಲುಮಾತಿನ ನಗುನಗುತ್ತಲೇ ಇರುವ ಸ್ನೇಹಜೀವಿ ಯಾವತ್ತೂ ಯಾರಿಗೂ ಕೇಡನ್ನು ಬಯಸಲಿಲ್ಲ ಹಣಕಾಸು ಲಾಭದ ಬಗ್ಗೆ ಮಾತನ್ನೇ ಆಡಲಿಲ್ಲ ಅಂತಹ ಗೆಳೆಯ ನಮ್ಮೊಡನಿಲ್ಲಾ ಎಂಬುದನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ
ಬಿಸಿಲ ಬೆಂಗಾಡು ಬಳ್ಳಾರಿಯ ಕೊಟ್ಟೂರಿನ ಶ್ರೀನಿವಾಸ ಹಾಸನದ ಕೊಟ್ಟೂರು ಶ್ರೀನಿವಾಸ ನಾಗಿಯೇ ಬದುಕಿದ ವ್ಯಕ್ತಿ
ಆತನ ಪತ್ನಿ ಪ್ರಮೀಳ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಅನಿವಾರ್ಯ ವಾಗಿ ಹಾಸನಕ್ಕೆ ಬಂದಾತ ಹಾಸನದ ಮಣ್ಣಿನ ಮಗನಾಗಿ ಇಲ್ಲಿಯೇ ಬದುಕನ್ನು ಮುಗಿಸಿ ಪಂಚಭೂತಗಳಲ್ಲಿ ಲೀನವಾದನು
ವಿದ್ಯಾರ್ಥಿ ದಿಸೆಯಲ್ಲಿ ಅರ್ ಎಸ್ ಎಸ್ ನಿಂದ ಆಕರ್ಷಿತರಾಗಿ ಕೆಲಕಾಲ ಸ್ವಯಂಸೇವಕ ರಾಗಿಯೂ ಇದ್ದರು
ಅದೇಕೋ ಆತನ ಜಾಯಮಾನಕ್ಕೆ ಒಗ್ಗದ ಕಾರಣ ಅಲ್ಲಿ ಮುಂದುವರೆಯಲಿಲ್ಲ
ಹಾಸನಕ್ಕೆ ಬಂದ ಬಳಿಕ ದಲಿತ ಮುಖಂಡ ಚಂದ್ರಪ್ರಸಾದ ತ್ಯಾಗಿ ಅವರ ಸಂಪರ್ಕಕ್ಕೆ ಬಂದವನೆ ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಸಾಕಷ್ಟು ಹೋರಾಟಗಳಲ್ಲಿ ಸಕ್ರಿಯ ರಾಗಿದ್ದು ಎಲ್ಲೇ ಅನ್ಯಾಯವಾದರೂ ಪ್ರತಿಭಟಿಸುವ ಮನಸ್ಥಿತಿ ಹೊಂದಿದ್ದನು
ಹಾಸನಕ್ಕಿಂತಲೂ ಕಟ್ಟರ್ ಫ್ಯೂಡಲ್ ವ್ಯವಸ್ತೆಯ ಬಳ್ಳಾರಿಯವನಾಗಿ ಶೋಷಣೆಯನ್ನು ಹೆಚ್ಚು ಬಲ್ಲವ ಹಾಗೂ ಅನುಭವಿಸಿದವನಾದ ಕಾರಣ ಆತನಲ್ಲಿ ಶೋಷಣೆಯ ಬಗ್ಗೆ ಸಹಜವಾಗಿಯೇ ಆಕ್ರೋಶ ಹೆಚ್ಚಾಗಿತ್ತು
ಅದೇಕೋ ದಲಿತ ಚಳುವಳಿಗಳಿಂದ ಸಕ್ರಿಯವಾಗಿ ದೂರುಳಿದ ಕೊಟ್ಟೂರು ಆಗಾಗ್ಗೆ ದೌರ್ಜನ್ಯದ ಪ್ರಕರಣಗಳು ನಡೆದಾಗ ಬೀದಿಗಿಳಿದು ಹೋರಾಟ ಬೆಂಬಲಿಸುತ್ತಿದ್ದುದು ನೆನಪಿದೆ
ಪ್ರೊಫೆಸರ್ ಎಂ.ನಂಜುಂಡ ಸ್ವಾಮಿ ಅವರ ಬಗ್ಗೆ ವಿಶೇಷ ಒಲವಿದ್ದ ಕೊಟ್ಟೂರು ಅ ನಂತರ ರೈತ ಸಂಘದಲ್ಲಿ ಗುರುತಿಸಿಕೊಂಡು ಸಕ್ರಿಯವಾಗಿ ಹೋರಾಟಗಳಿಗೆ ತೊಡಗಿಕೊಂಡರು ಅದರ ನಡುವೆ ನೆಲ ಜಲದ ಹೋರಾಟ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲಾ ಸಂಘಟನೆಗಳ ಜೊತೆಸೇರಿ ಪ್ರತಿಭಟಿಸುತ್ತಿದ್ದ ಹುಟ್ಟು ಹೋರಾಟಗಾರ
ನಂಜುಂಡ ಸ್ವಾಮಿ ಅವರ ಮರು ಜಪ್ತಿ ಚಳುವಳಿ ಸಂದರ್ಭದಲ್ಲಿ ಸಕ್ರಿಯನಾಗಿದ್ದಲ್ಲದೇ ಎಂಡಿಎನ್ ಕಾಲವಾದ ನಂತರ ಕೋಡಿಹಳ್ಳಿ ಬಣದಲ್ಲಿ ಗುರುತಿಸಿಕೊಂಡು ಜಿಲ್ಲಾಧ್ಯಕ್ಷನಾಗಿ ನಿರಂತರ ಕಾರ್ಯ ನಿರ್ವಹಿಸಿದ್ದರು
ಜೀವನ ನಿರ್ವಹಣೆಗೆ ಪುಸ್ತಕದ ಮಾರಾಟವನ್ನು ಆರಂಭಿಸಿದ ಕೊಟ್ಟೂರು ತೇಜಸ್ವಿ ಅವರ ಮಿಲೇನಿಯಂ ಸೀರೀಸ್ ಅನ್ನು ಓದುಗರಿಗೆ ನಿರಂತರವಾಗಿ ತಲುಪಿಸುವಲ್ಲಿ ಖುಷಿ ಕಂಡ ವ್ಯಕ್ತಿ
ತೇಜಸ್ವಿ ಅವರೊಡನೆ ಆಶ್ಚರ್ಯ ಪಡುವಷ್ಟು ಆತ್ಮೀಯತೆ ಹೊಂದಿದ್ದ ವ್ಯಾವಹಾರಿಕವಾಗಿ ಚತುರನಲ್ಲದ ಕಾರಣ ಹಾಗೂ ತೀರಾ ನಿಷ್ಟುರವಾದಿಯಲ್ಲದ್ದರಿಂದ ಎಲ್ಲೇ ಪುಸ್ತಕದ ಮಾರಾಟ ನಡೆದರೂ ಕೊಟ್ಟೂರ್ಗೆ ಪುಸ್ತಕಗಳು ಖಾಲಿಯಾಗುತ್ತಿದ್ದವು ವ್ಯಾಪಾರ ಮಾತ್ರ ನಷ್ಟವಾಗುತ್ತಿತ್ತು
ಪತ್ನಿ ಪ್ರಮೀಳಾ ಅವರು ಸರಕಾರಿ ಉದ್ಯೋಗದಲ್ಲಿದ್ದ ಕಾರಣ ಬದುಕು ಸುಗಮವಾಗಿ ಸಾಗಿತ್ತಾದ್ದರಿಂದ ಇದ್ದೊಬ್ಬ ಮಗಳ ಮದುವೆ ಮಾಡಿ ಮೊಮ್ಮಗನ ಜೊತೆ ಆಟವಾಡುತ್ತಾ ಸಂತಸದಿಂದಿದ್ದ ಕೊಟ್ಟೂರ್ ನನ್ನು ಶುಗರ್ ಹೈರಾಣಾಗಿಸಿತ್ತು ಜೊತೆಗೆ ಆತ ಆಯುರ್ವೇದ ಔಷಧ ಬಳಕೆ ಇತ್ಯಾದಿಯು ಸಹ ಉಲ್ಬಣಕ್ಕೆ ಕಾರಣವಾಗಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಯಿತು
ತೀರಾ ಇತ್ತೀಚೆಗೆ ನಡೆದಾಡಲು ಕಷ್ಡಪಡುವಂತಾಗಿತ್ತು..
ಪರಿಸ್ಥಿತಿ ಉಲ್ಬಣವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದಾತ ಜೀವಂತ ಮರಳಲೇ ಇಲ್ಲಾ
ಸುಮಾರು ಎಂಟತ್ತು ವರುಷದ ಹಿಂದೆ ಹಾಸನ ಬಿಟ್ಟು ಶಿವಮೊಗ್ಗದಲ್ಲಿ ಕೊಟ್ಟೂರು ಕುಟುಂಬ ವಾಸವಿತ್ತು ಆಗ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ಪತ್ರಕರ್ತರಾದ ಶಿವಾನಂದ ತಗಡೂರು,ಎ.ಅರ್.ವೆಂಕಟೇಶ್ ನಾನು ಹಾಗೂ ಡಿಎಸ್ಎಸ್ ನ ಸಮದ್ ಕೊಟ್ಟೂರು ಮನೆಗೆ ತೆರಳಿ ಹಾಸನಕ್ಕೆ ಬನ್ನಿ ಎಂದಿದ್ದೆವು ಆತನ ಮನದಲ್ಲೂ ಅದೇ ಬಯಕೆ ಇದ್ದ ಕಾರಣ ಮನೆಯವರಿಗೆ ವರ್ಗಾವಣೆ ಮಾಡಿಸಿಕೊಂಡು ಕುಟುಂಬ ಸಮೇತ ಮತ್ತೆ ಹಾಸನಕ್ಕೆ ಮರಳಿದ್ದನು ಹಾಗೆ ಬಂದವನು ಮತ್ತೆ ಎಲ್ಲಿಗೂ ಹೋಗಲಾಗಲೇ ಇಲ್ಲಾ........
#ಹಾಸನ
#ರೈತ ಪರ
#ಕೊಟ್ಟೂರು ಶ್ರೀನಿವಾಸ್
#ವಿಮರ್ಶಾ-vimarsha
*ಹರೀಶ್ ಹೆಚ್ ಆರ್
ಕೋಟೆ *
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info