ಸಂಪಾದಕರು
ಹರೀಶ್ ಹೆಚ್ ಆರ್
ಕೋಟೆ
*ಶತನಾಟಕ* *ಸಾರ್ವಭೌಮ ,ಕಾದಂಬರಿಕಾರರು* *,ವಿಚಾರವಾದಿಗಳು,ಸಿನಿಮಾ* *ನಿರ್ದೇಶಕರು ,* *ನಿರ್ಮಾಪಕರು,ಕರ್ನಾಟಕ* *ರಾಜ್ಯೋತ್ಸವ ಪ್ರಶಸ್ತಿ* *ಪುರಸ್ಕೃತರು, ಅನೇಕ ರಾಜ್ಯ* *ಮಟ್ಟದ* *ಪ್ರಶಸ್ತಿಗಳು,ಪುರಸ್ಕಾರಗಳು* *ಸಂದಿವೆ.ನೇರ* *ನುಡಿಯ,* *ನೇರ ನಡೆಯ,ಬಿಚ್ಚುಮನಸ್ಸಿನ* *ಹೃದಯವಂತ ಸಾಹಿತಿ* , ತಮ್ಮ ದೇಹವನ್ನೇ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ದಾನ ಮಾಡಿದ ಪರಮಧಾನಿ,ತೊಂಭತ್ತು ವರ್ಷಗಳ ಸಾರ್ಥಕ ಬದುಕು ಬಾಳಿದ ಮಾನವತಾವಾದಿ, ನಮ್ಮ ನಡುವಿನ ಸಾಹಿತ್ಯ ಪರಂಪರೆಯ ಮಹಾ ಕೊಂಡಿ ಇನ್ನಿಲ್ಲ.
ಇಂದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಉಸಿರೆಳಿದಿದ್ದಾರೆ.
ನಾಟಕ ಸಾರ್ವಭೌಮ - ಬೇಲೂರು ಕೃಷ್ಣಮೂರ್ತಿ
ಪರಿಚಯ ಲೇಖನ-ಕೊಟ್ರೇಶ್.ಎಸ್. ಉಪ್ಪಾರ್.
ನಾಟಕ ಎಂದಾಕ್ಷಣ ನಮಗೆ ದುತ್ತನೇ ನೆನಪಿಗೆ ಬರುವುದು ಬೇಲೂರು ಕೃಷ್ಣಮೂರ್ತಿಯವರು.
ಕನ್ನಡ ಸಾರಸ್ವತ ಲೋಕದಲ್ಲಿ ‘ನಾಟಕ’ ಪ್ರಕಾರಕ್ಕೆ ಭದ್ರ ಅಡಿಪಾಯ ಹಾಕಿದವರಲ್ಲಿ ಬೇಲೂರು ಕೃಷ್ಣಮೂರ್ತಿಯವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಇವರು 1931 ಆಗಸ್ಟ್ 08 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಅನಂತರಾಮಯ್ಯ ಮತ್ತು ಲಕ್ಷ್ಮೀದೇವಮ್ಮ ಬ್ರಾಹ್ಮಣ ದಂಪತಿಗಳ ಪುತ್ರರಾಗಿ ಜನಿಸಿದರು.
110 ನಾಟಕಗಳು, 30 ಇತರ ಕೃತಿಗಳನ್ನು ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕೃತಿರತ್ನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೃಷ್ಣಮೂರ್ತಿಯವರ ವ್ಯ್ಕತಿತ್ವ ಅಸಮಾನ್ಯವಾದುದು. ಹಾಸನ ಜಿಲ್ಲೇಗಷ್ಟೇ ಸೀಮಿತವಾಗದೆ ಕನ್ನಡ ಮನಸ್ಸುಗಳೆಲ್ಲೆಲ್ಲಿವೆಯೋ ರಾಜ್ಯ, ಅಂತರರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ನಾಟಕಗಳು ಪ್ರದರ್ಶನ ಕಂಡಿವೆ.
1952 ರಿಂದ ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಇವರು ಸಹಸ್ರಾರು ಶಿಷ್ಯವೃಂದವನ್ನು ಹೊಂದಿದ್ದಾರೆ. ಒಳ್ಳೆಯ ನಟರೂ ಆಗಿದ್ದ ಇವರು ನಿರ್ದೇಶಕರಾಗಿಯೂ ಕಾರ್ಯಪ್ರವೃತ್ತಗೊಂಡು ಯಶಕಂಡಿದ್ದಾರೆ.
ದಿ. ಮುಸುರಿಕೃಷ್ಣಮುರ್ತಿಯವರು ಸ್ಥಾಪಿಸಿದ್ದ ದತ್ತಾತ್ರೇಯ ನಾಟಕ ಮಂಡಳಿಯಲ್ಲಿ ಸಹ ನಟರಾಗಿ ಅಭಿನಯಿಸುತ್ತಾ ರಂಗಭೂಮಿ ಹೊರ-ಒಳವುಗಳನ್ನು ಅರಿತು ತನ್ಮತೆಯಿಂದ ಮೈಗೂಡಿಸಿಕೊಂಡರು. ನಂತರ ‘ನಾಟಕ’ ರಚನೆಕಡೆಗೆ ವಾಲಿದ ಇವರ ಮನಸ್ಸು ಉತ್ಕೃಷ್ಟ ಸಾಹಿತ್ಯ ಸೃಷ್ಠಿಸುವಲ್ಲಿ ಹಿಂದೆ ಬೀಳಲಿಲ್ಲ. ತತ್ಪರಿಣಾಮವಾಗಿಯೇ 1962 ರಲ್ಲಿ ‘ಬಲಿದಾನ’ ಎಂಬ ನಾಟಕ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಸುಮಾರು 110 ನಾಟಕಗಳನ್ನು ಕಟ್ಟಿಕೊಟ್ಟಿ ಹೃದಯ ಶ್ರೀಮಂತಿಕೆ ಕೃಷ್ಣಮೂರ್ತಿಯವರದು.
‘ತ್ಯಾಗಿ’ ಲಚ್ಚಿ, ಕಂಬನಿ, ಆಹುತಿ ಎಂಬ ನಾಟಕಗಳು ಬೇಲೂರು ಕೃಷ್ಣಮೂರ್ತಿಯವರಿಗೆ ಭದ್ರವಾದ ನೆಲೆ ತಂದುಕೊಟ್ಟವು. ಸಮಾಜದಲ್ಲಿ ನಡೆಯುತ್ತಿರುವ ಅನೀತಿ, ಅನ್ಯಾಯ, ಅತ್ಯಾಚಾರ, ಅಟ್ಟಹಾಸ, ಭ್ರಷ್ಟಚಾರ, ಕಂದಾಚಾರಗಳೇ ಇವರ ನಾಟಕದ ವಿಷಯ ವಸ್ತುಗಳಾಗಿವೆ. ಇವುಗಳಿಂದ ಸಮಾಜ ಯಾವ ರೀತಿ ಅಧೋಗತಿಗೆ ಈಡಾಗುತ್ತಿದೆ ಎಂದು ನವಿರಾಗಿ ಬಿಡಿಸಿಟ್ಟಿದ್ದಾರೆ.
ಇವರ ಹಲವಾರು ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಕೃತಿಗಳು ಸಹ ಸಾಕಷ್ಟು ಪುನರ್ಮುದ್ರಣ ಕಂಡಿವೆ. ಕೇವಲ ನಾಟಕಕ್ಕೆ ಮಾತ್ರ ಸೀಮಿತವಾಗದೆ ಕಾದಂಬರಿ, ಬರಹಗಳನ್ನೊಳಗೊಂಡಂತೆ ಸುಮಾರು 30 ಕೃತಿಗಳನ್ನು ನೀಡಿದ್ದಾರೆ.
2010 ಮಾರ್ಚ್ 9 ಮತ್ತು 10 ರಂದು ಬೇಲೂರಿನಲ್ಲಿ ಹಾಸನ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಬೇಲೂರು ಕೃಷ್ಣಮೂರ್ತಿಯವರ ವ್ಯಕ್ತಿತ್ವ ಪ್ರಬುದ್ದಮಾನವಾದುದು. ಯಾವುದೇ ಆಡಂಬರ, ಅಹಂಕಾರಗಳಿಲ್ಲದ ಸಹೃದಯಿ, ಸರಳ ಜೀವನ ಉದಾತ್ತ ಚಿಂತನೆಯ ಮೂರ್ತಿ ಎಂದರೆ ಅತಿಶಯೋಕ್ತಿಯಾಗಲಾರದು.
ರಂಗಭೂಮಿಗೆ ಮಾತ್ರ ಸೀಮಿತವಾಗದೆ ಇವರ ಸಾಹಿತ್ಯ ಕನ್ನಡ ಚಲನಚಿತ್ರರಂಗದತ್ತಲೂ ಮುಖಮಾಡಿ ನೋವು ನಲಿವುಗಳನ್ನು ಅನುಭವಿಸಿದೆ. ಬೇಲೂರು ಫಿಲಂಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಕೃಷ್ಣಮೂರ್ತಿಯವರು ಅವರದೇಯಾದ ‘ಕಂಬನಿ’ ಎಂಬ ನಾಟಕವನ್ನು ‘ತೀರದ ಬಯಕೆ’ ಎಂಬ ಚಲನಚಿತ್ರ ನಿರ್ಮಿಸಿ ಹೊರತಂದಿದ್ದಾರೆ. ಜುಗ್ಗಾಸ್ವಾಮಿ ಜುಗ್ಗಾ, ಬಾಡಿಗೆ ಬಿಡಾರ, ಪೊದಕುಲಡಾಯಿ, ಜ್ವಾಲೆ ಹೀಗೆ ಹತ್ತಾರು ಕಥೆಗಳನ್ನು ಕಿರುತೆರೆಗೆ ತಂದಿದ್ದಾರೆ.
1972ರಲ್ಲಿ ‘ತೀರದ ಬಯಕೆ’ ಚಲನಚಿತ್ರ ನಿರ್ಮಿಸಲು ಪ್ರಾರಂಭಿಸಿ 1982 ರಲ್ಲಿ ಚಿತ್ರ ಬಿಡುಗಡೆಮಾಡಿದರು. ಆಗಿನ ಕಾಲದಲ್ಲಿಯೇ 15 ಲಕ್ಷ ರೂ ಸಾಲ ಮಾಡಿ ಸಿನಿಮಾ ಮಾಡಿ ಕೈ ಸುಟ್ಟುಕೊಂಡರು. ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇವರ ವರಮಾನ ಅಷ್ಟಕ್ಕಷ್ಟೇ. ಮಾಡಿದ ಸಾಲ ತೀರಿಸಲು ಸುಮಾರು ದಶಕಗಳೇ ಬೇಕಾಯಿತಂತೆ. ಆದರೆ ಸಾಲ ಕೊಟ್ಟವರಿಗೆ ಯಾರಿಗೂ ಒಂದು ಪೈಸೆ ಮೋಸ ಮಾಡಲಿಲ್ಲವೆಂದು ಸಂತಸದಿಂದಲೇ ಹೇಳುತ್ತಾರೆ.
ಇವರೊಬ್ಬ ಅಪ್ಪಟ ನಾಸ್ತಿಕವಾದಿ. ಮೂಡನಂಬಿಕೆ, ಮಾಟ-ಮಂತ್ರ ತಂತ್ರದ ವಿರುದ್ದ ಧ್ವನಿ ಎತ್ತಿದ್ದಾರೆ. ವಿಜ್ಞಾನ ಮಾತ್ರ ಸತ್ಯ ಉಳಿದದ್ದು ಮಿಥ್ಯ ಎಂಬ ಸಿದ್ದಾಂತವನ್ನು ಬಲವಾಗಿ ನಂಬಿದವರು. ಇವರ ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಾಮಾಜಿಕ ಸಂಘಟನೆ ಸೇವೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ.
1993 ರಲ್ಲಿ ಕರ್ನಾಟಕ ಅಕಾಡೆಮಿಯ ಪ್ರಶಸ್ತಿ, 2005ರಲ್ಲಿ ದೆಹಲಿಯಲ್ಲಿ ನಡೆದ 22ನೇಯ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಸನ್ಮಾನ, ತುಮಕೂರಿನ ಅಭಿಮಾನಿಗಳು ರಜತ ಕಿರೀಟದೊಂದಿಗೆ ‘ನಾಟಕ ಸಾರ್ವಭೌಮ’ ಎಂಬ ಕೃತಿ ಅರ್ಪಿಸಿ ಸನ್ಮಾನಿಸಿದ್ದಾರೆ. ಹೀಗೇ ಇವರ ಸಾಧನೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ಈಗ ಆ ಮಹಾನ್ ಚೈತಾತ್ಮ ಚಿರನಿದ್ರೆಗೆ ಜಾರಿದೆ.
*ಕಲ್ಲಹಳ್ಳಿ ಹರೀಶ ಜಿಲ್ಲಾ ಗೌರವ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ತು ,ಹಾಸನ.* ಮತ್ತು ಕನ್ನಡ ಸಾಹಿತ್ಯ ಪರಿಷದ್ ನ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರುಗಳು, ಸಾಹಿತ್ಯಾಭಿಮಾನಿಗಳು ,ರಂಗಭೂಮಿ ಕಲಾವಿದರುಗಳು ಮತ್ತು ತಂತ್ರಜ್ಞರು ಹಾಗೂ ಸಹಸ್ರಾರು ಶ್ರಿಯುತರ ಅಭಿಮಾನಿಗಳು ಅವರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿದಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info