ದೇಶದ ಅಭಿವೃದ್ಧಿಗೆ ಸಾಕ್ಷರತೆ ಮುಖ್ಯ: ಜಿಲ್ಲಾಧಿಕಾರಿ ಆರ್. ಗಿರೀಶ್
ಹಾಸನ,ಸೆ.22 (ಕರ್ನಾಟಕ ವಾರ್ತೆ):-
ಒಂದು ದೇಶ ಸಮೃದ್ಧವಾಗಬೇಕಾದರೆ ಸಾಕ್ಷರತೆ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯು ತಮ್ಮಲ್ಲಿರುವ ಜ್ಞಾನವನ್ನು ಸುತ್ತಮತ್ತಲ ಜನರಿಗೆ ಹಂಚುವ ಮೂಲಕ ಅರಿವು ಮೂಡಿಸಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿಂದು ಏರ್ಪಡಿಸಿದ್ದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಹೆಚ್ಚು ಅಶಿಕ್ಷಿತರಿದ್ದು, ಇಂದಿನ ದೇಶದಲ್ಲಿಂದು ಸಾಕ್ಷರತಾ ಪ್ರಮಾಣ ಶೇ.77 ರಷ್ಟಿದೆ ಇದು ಶೇ.100ಕ್ಕೆ ಏರಬೇಕು ಎಂದರು.
ಜನರಲ್ಲಿನ ಅಜ್ಞಾನ, ಅಂದಕಾರ, ಮೌಡ್ಯ ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಲು ಜ್ಞಾನ ಮುಖ್ಯ ಹಾಗಾಗಿ ಅನಕ್ಷರಸ್ತರಿಗೆ ಶಿಕ್ಷಣ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಉತ್ತಮ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ಹಾಗಾಗಿ ಜನರಲ್ಲಿ ಸಾಕ್ಷರತೆಯ ಅರಿವು ಮೂಡಿಸುವುದರ ಜೊತೆಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಬಗ್ಗೆ ತಿಳಿಸಿದರೆ ದೇಶವು ಪ್ರಗತಿಯ ಪಥದತ್ತ ಸಾಗುತ್ತದೆ ಎಂದು ಆರ್. ಗಿರೀಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಸಾಕ್ಷರತಾ ದಿನಾಚರಣೆಯು 1967 ರಲ್ಲಿ ಪ್ರಾರಂಭವಾಯಿತು. ಜಿಲ್ಲೆಯು ಶೇ. 76ರಷ್ಟು ಸಾಕ್ಷರತೆಯನ್ನು ಹೊಂದಿದೆ ಎಂದರು.
ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಯಾರು ದಬ್ಬಾಳಿಕೆ ಮಾಡುತ್ತಾರೊ ಅಂತಹವರಿಗೆ ಮಾತ್ರ ದೊರೆಯುತ್ತಿದೆ. ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಿಕ್ಷಣ ಮುಖ್ಯ ಹಾಗಾಗಿ ತಿಳಿದವರು ಜನರಲ್ಲಿ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಅಕ್ಷರಸ್ಥರು ತಾವು ಕಲಿತಿರುವುದನ್ನು ಸುತ್ತಲಿನ ಜನರಿಗೆ ತಿಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದರೆ ಅಂದು ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಹಳ್ಳಿಯ ಜನರನ್ನು ಹಿಂದಿನ ಕಾಲದಂತೆ ವಂಚಿಸಲು ಸಾಧ್ಯವಿಲ್ಲ. ಸಾಕ್ಷರತೆ ಹೆಚ್ಚಾದಂತೆ ಜನರಲ್ಲಿ ಅರಿವು ಮೂಡಿದೆ ಎಂದು ಬಿ.ಎ. ಪರಮೇಶ್ ಅವರು ಅಭಿಪ್ರಾಯ ಪಟ್ಟರು.
ಶಿಕ್ಷಣ ತಜ್ಞರಾದ ಡಾ. ಓಬಳೇಶ ಘಟ್ಟಿ ಅವರು ಮಾತನಾಡಿ ಮಣ್ಣಿಗೆ, ಹೊನ್ನಿಗೆ, ಹೆಣ್ಣಿಗೆ ಸತ್ತಿದ್ದು ಕೋಟಿ ಜನರಾದರೆ ವಿದ್ಯೆಯಿಂದ ಸತ್ತವರು ಯಾರೂ ಇಲ್ಲ. ಹಾಗಾಗಿ ಶಿಕ್ಷಣದ ಮೂಲಕ ಮೂರ್ಖ, ಅನಿಷ್ಟ, ಅಜ್ಞಾನ, ಅಂಧಕಾರ, ಮೌಢ್ಯ, ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಿ ಎಲ್ಲರನ್ನು ಸಾಕ್ಷರಸ್ತರನ್ನಾಗಿಸಲು ಶ್ರಮಿಸಬೇಕು ಎಂದರು.
ಸಾಕ್ಷರತೆ ಎಂದರೆ ಅಕ್ಷರ ಅಭ್ಯಾಸ ಮಾತ್ರವಲ್ಲ. ವ್ಯಕ್ತಿಯ ಭಂದ ವಿಮೋಚನೆ ಕುರಿತು ಜನರಿಗೆ ಮನದಟ್ಟು ಮಾಡುವುದೇ ಸಾಕ್ಷರತೆ ಎಂದು ತಿಳಿಸಿದರಲ್ಲದೇ, ಅನಕ್ಷರಸ್ಥರು ಯಾರೂ ದಡ್ಡರಲ್ಲ, ಅವರಿಗೂ ಜಾನಪದ ಪಾಂಡಿತ್ಯವಿದೆ. ಅವರೆಲ್ಲರ ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂದು ಅವರು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಬುದ್ದ, ಬಸವ, ಶರಣರು ಸಮಾಜದ ಒಳಿತಿಗಾಗಿದುಡಿದವರು. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ನೀಡಲು ಶ್ರಮಿಸಿದವರು ಹಾಗಾಗಿ ಅಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಡಿಸಿಕೊಂಡು ತಮ್ಮಲ್ಲಿರುವ ಶಿಕ್ಷಣವನ್ನು ಬೇರೆಯವರಿಗೂ ಹಂಚಬೇಕು ಎಂದು ಓಬಳೇಶ ಘಟ್ಟಿ ಅವರು ಹೇಳಿದರು.
ದೇಶದಲ್ಲಿ ಅನಕ್ಷರತೆಯೆಂಬ ಕತ್ತಲಿನಿಂದ ಸಾಕ್ಷರತೆಯ ಬೆಳಕಿಗೆ ಹೋಗಲು ಶಿಕ್ಷಣ ಮುಖ್ಯ ಹಾಗಾಗಿ ಎಲ್ಲರೂ ಪ್ರಯತ್ನ ಪಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಯದರ್ಶಿ ಲಕ್ಷ್ಮಣ್ ಎಂ. ಬಳೂಟಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕರಾದ ತಮ್ಮಣ್ಣಗೌಡ, ಕಲಾವಿದರಾದ ಗ್ಯಾರಂಟಿ ರಾಮಣ್ಣ ಹಾಗೂ ಮತ್ತಿತರರು ಹಾಜರಿದ್ದರು.
**********
ಸಂಪಾದಕರು
ಹರೀಶ್ ಹೆಚ್ ಆರ್
ಕೋಟೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info