ಸಚಿವರುಗಳಿಂದ ಹೇಮಾವತಿ ಜಲಾಶಯಕ್ಕೆ ಬಾಗಿನ ಸಮರ್ಪಣೆ.
ಸುದ್ದಿ ಸಂಪಾದಕರು
ಹರೀಶ್ ಹೆಚ್ ಆರ್ (ಕೋಟೆ ).
ಹಾಸನ,ಆ.21(ಕರ್ನಾಟಕ ವಾರ್ತೆ):- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ನೀರಾವರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಇಂದು ಹೇಮಾವತಿ ಜಲಾಶಯಕ್ಕೆ ಬಾಗಿನ
ಸಮರ್ಪಿಸಿದರು.
ಗೊರೂರಿನ ಹೇಮಾವತಿ ಅಣೆಕಟ್ಟೆಗೆ ಬಾಗಿನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಗೋಪಾಲಯ್ಯ ಅವರು ಹೇಮಾವತಿ ಜಲಾಶಯದಿಂದ ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ನೀರು ಬಿಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುಮಾರು 5,500 ಕ್ಯೂಸೆಕ್ಸ್ನಷ್ಟು ನೀರನ್ನು ಈ ಬಾರಿ ಜಲಾಶಯದಿಂದ ಬಿಡಲಾಗಿದ್ದು, ಪೂರ್ವ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕನಿಷ್ಟ 10 ದಿನಗಳವರೆಗೂ ನೀರು ಬಿಡಲಾಗುವುದು ಎಂದು ಕೆ. ಗೋಪಾಲಯ್ಯ ಹೇಳಿದರು.
ಅತಿವೃಷ್ಠಿಯಿಂದಾಗಿ ನಷ್ಟ ಅನುಭವಿಸಿರುವ ರೈತರಿಗೆ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದು, ಶೀಘ್ರವೇ ಜಿಲ್ಲಾಧಿಕಾರಿಗಳು ವರದಿ ನೀಡಲಿದ್ದಾರೆ. ನಂತರ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ನೀರಾವರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಮಾತನಾಡಿ ಪೂರ್ವ ಭಾಗದ ರೈತರು ಅನಾವೃಷ್ಠಿಯಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಅಂತರ್ಜಲದ ಮಟ್ಟವೂ ಸಹ ಬಹಳಷ್ಟು ಕುಸಿದಿದೆ. ಇದರಿಂದ ಸಂಪೂರ್ಣವಾಗಿ ಹೇಮಾವತಿ ಜಲಾಶಯದ ಮೇಲೆ ರೈತರು ಅವಲಂಭಿತರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕೇವಲ ಶೇ.1 ರಷ್ಟು ಜಿ.ಡಿ.ಪಿ ಹೆಚ್ಚಾದರೂ ಸಹ ಅದು ಶೇ. 4 ರಷ್ಟು ಹೆಚ್ಚಾದಂತೆ. ರೈತನ ವರಮಾನ ಹೆಚ್ಚಾದರೆ, ಕೈಗಾರಿಕೆಯಿಂದ ಸರ್ಕಾರಕ್ಕೆ ಬರುವ ಆದಾಯಕ್ಕೂ 4 ಪಟ್ಟು ಹೆಚ್ಚು ಆದಾಯ ದೊರೆಯುತ್ತದೆ ಎಂದು ಹೇಳಿದರು.
ನಾಲೆ ಮೂಲಕ ಹೇಮಾವತಿ ಜಲಾಶಯದ ನೀರನ್ನು ಬಿಡುವುದರಿಂದ ಬೆಂಗಳೂರು ಹಾಗೂ ತುಮಕೂರು ಸೇರಿದಂತೆ ವಿವಿಧ ಭಾಗಗಳಿಗೆ ಕುಡಿಯುವ ನೀರಿನ ಪೂರೈಕೆಯಾಗುತ್ತದೆ. ಕಳೆದ ಮೂರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು, ಬರದ ನಾಡೆಂದೇ ಕರೆಯಲಾಗುವ ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಉಲ್ಬಣ ಸಂಭವಿಸಿಲ್ಲ, ಹಾಗಾಗಿ ಈ ಬಾರಿ ನಮ್ಮ ಜಿಲ್ಲೆಯ ಪರವಾಗಿ ನಾನೂ ಕೂಡ ಹೇಮಾವತಿ ನದಿಗೆ ಬಾಗಿನ ಸಲ್ಲಿಸಿದ್ದೇನೆ ಎಂದು ಜೆ.ಸಿ ಮಾಧುಸ್ವಾಮಿ ಹೇಳಿದರು.
ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರು ಮಾತನಾಡಿ ಈ ಬಾರಿಯ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದೇ ಇದ್ದರೂ ಸಹ ಆಲೂರು, ಸಕಲೇಶಪುರ, ಅರಕಲಗೂಡು, ಬೇಲೂರು ಹಾಗೂ ಮೂಡಿಗೆರೆ ತಾಲ್ಲೂಕುಗಳಲ್ಲಿ ರಸ್ತೆಗಳು, ಕಾಫಿ ಹಾಗೂ ಮೆಣಸು ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಯಾ ತಾಲ್ಲೂಕುಗಳಿಗೆ ಬೆಳೆ ಪರಿಹಾರಕ್ಕೆ ಕನಿಷ್ಠ 100 ಕೋಟಿ ಹಾಗೂ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂಗಳನ್ನು ಮೀಸಲಿಡಬೇಕು ಎಂದರು.
ಕಾವೇರಿ ನೀರಾವರಿ ನಿಗಮ, ಹೇಮಾವತಿ ಅಣೆಕಟ್ಟು ವಿಭಾಗ ಹಾಗೂ ಪುನರ್ವಸತಿ ವಿಭಾಗಕ್ಕೆ ಕಳೆದ ಬಾರಿ ಸುಮಾರು 72 ಕೋಟಿ ರೂ ಅಂದಾಜು ಮೊತ್ತದಲ್ಲಿ 172 ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿದ್ದೆವು, ಈ ಬಾರಿಯೂ ಸಹ ಸುಮಾರು 32 ಕೋಟಿ ರೂ ಅಂದಾಜು ಮೊತ್ತದಲ್ಲಿ 62 ಕಾಮಗಾರಿಗಳಿಗೆ ಮಂಜೂರಾತಿ ಕೇಳಿದ್ದೇವೆ. ಈ ಬಾರಿ ಕಾಮಗಾರಿಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಸಚಿವರಲ್ಲಿ ಒತ್ತಾಯಿಸುತ್ತೇವೆ ಎಂದು ಶಾಸಕರು ಹೇಳಿದರು.
ಶಾಸಕರಾದ ಸಿ.ಎನ್ ಬಾಲಕೃಷ್ಣ, ಎ.ಟಿ ರಾಮಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್ ನಂದಿನಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*********
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info