ಸೆ.19 ರಂದು ರಾಜ್ಯಾದ್ಯಂತ ಇ -ಲೋಕ ಅದಾಲತ್: ನ್ಯಾ|| ಅರವಿಂದ ಕುಮಾರ್.
ಹಾಸನ,ಆ.28(ಕರ್ನಾಟಕ ವಾರ್ತೆ):-
ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಸೆ.19 ರಂದು ಇ -ಲೋಕ ಅದಾಲತ್ ಏರ್ಪಡಿಸಲಾಗಿದ್ದು, ರಾಜಿ ತೀರ್ಮಾನದ ಮೂಲಕ ಸಾವಿರಾರು ಪ್ರಕರಣಗಳ ಇತ್ಯರ್ಥ ನಿರೀಕ್ಷಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಎಲ್ಲಾ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು ಕೊವಿಡ್-19 ಹಿನ್ನಲೆಯಲ್ಲಿ ಎಲ್ಲರಿಗೂ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ನ್ಯಾಯಾಲಯಗಳಲ್ಲಿ ವಿಚಾರಣೆಗಳು ತಡವಾಗುತ್ತಿವೆ ಹಾಗಾಗಿ ಬಾಕಿ ಇರುವ ರಾಜಿ ಸಂಧಾನದ ಮೂಲಕ ಬಗೆ ಹರಿಸಬಹುದಾದ ಪ್ರಕರಣಗಳನ್ನು ವಿಲೇವಾರಿ ಮಾಡಿ ತ್ವರಿತ ನ್ಯಾಯ ಒದಗಿಸಲು ಇ-ಲೋಕ ಅದಾಲತ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಸೆಪ್ಟಂಬರ್ 19 ರಂದು ಪ್ರಪ್ರಥಮವಾಗಿ ಇ -ಲೋಕ ಅದಾಲತ್ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಮೂಲಕ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ರಾಜಿಸಂಧಾನದಲ್ಲಿ ಪಾಲ್ಗೊಂಡು ನ್ಯಾಯಲಯದ ತೀರ್ಪು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಸರ್ವರಿಗೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು. ಇಲ್ಲಿ ನೀಡುವ ತೀರ್ಮಾನವನ್ನು ಇತರ ನ್ಯಾಯಲಯಗಳಲ್ಲಿ ಪ್ರಶ್ನಿಸುವಂತಿಲ್ಲ. ಹೆಚ್ಚಾಗಿ ಅಪಘಾತ ಪ್ರಕರಣಗಳು, ಚೆಕ್ ಬೌನ್ಸ್ ಮತ್ತಿತರ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಈಗಾಗಾಲೇ ಇನ್ಸ್ಯೂರೆನ್ಸ್ ಕಂಪನಿಗಳ ಪ್ರತಿನಿಧಿಗಳೊಂದಿಗೂ ಚರ್ಚಿಸಲಾಗಿದೆ. 8-9 ವರ್ಷಗಳ ಹಿಂದೆ ಅಪಘಾತಗಳು ಇನ್ನೂ ಪರಿಹಾರವಾಗಿಲ್ಲ. ಇವುಗಳನ್ನು ಇ -ಲೋಕ ಅದಾಲತ್ ಮೂಲಕ ಶೀಘ್ರ ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಅವರು ತಿಳಿಸಿದರು.
ಯಾವುದಾದರು ಕೇಸ್ಗಳ ಇತ್ಯರ್ಥ ಮಾಡಿಕೊಳ್ಳಲು ಕೋರ್ಟ್ ಅಥವಾ ಕಚೇರಿಗಾಗಲಿ ಹೋಗುವ ಅವಶ್ಯಕತೆ ಇಲ್ಲ ಅವರ ಸ್ಥಾನದಲ್ಲಿಯೇ ಕುಳಿತು ತಮ್ಮ ಲಾಯರ್ ಮುಖಾಂತರ ಎಲ್ಲಾ ರೀತಿಯ ಮೂಲಾಧಾರಗಳನ್ನು ಇನ್ಸ್ಯರೆನ್ಸ್ ಕಂಪನಿಗಳಿಗೆ ತಲುಪಿಸಿದರೆ ಅವರು ನಿಯಮಾನುಸಾರ ನೀಡಬೇಕಾದ ಪರಿಹಾರ ನೀಡುತ್ತಾರೆ ಎಂದು ನಾ|| ಅರವಿಂದ ಕುಮಾರ್ ಅವರು ಮಾಹಿತಿ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಅಲೋಕ್ ಆರಾಧ್ಯ ಅವರೂ ಕೂಡ
ಇ- ಲೋಕ ಅದಾಲತ್ನ ಉದ್ದೇಶ ಹಾಗೂ ಆಶಯಗಳ ಬಗ್ಗೆ ವಿವರಿಸಿದರು.
ಕಕ್ಷಿದಾರರ, ಪ್ರತಿವಾದಿಗಳು, ವಕೀಲರುಗಳು ಹಾಗೂ ನ್ಯಾಯಾಧೀಶರುಗಳು
ಇ- ಲೋಕ ಅದಾಲತ್ನ ಯಶಸ್ವಿಗೆ ಸಹಕರಿಸಬೇಕು ಎಂದರು.
ವೀಡಿಯೋ ಸಂವಾದ ಮುಗಿದ ನಂತರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ|| ಶಿವಣ್ಣ ಅವರು ಜಿಲ್ಲೆಯ ಇ- ಲೋಕ್ ಅದಾಲತ್ ವ್ಯವಸ್ಥೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು ಜಿಲ್ಲೆಯಲ್ಲಿ ಹಲವು ರೀತಿಯ 65,908 ಪ್ರಕರಣಗಳು ಬಾಕಿ ಇವೆ ಇದರಲ್ಲಿ, ರಾಜಿಗೆ ಯಾವ ಪ್ರಕರಣಗಳು ಕಾನೂನು ಮಿತಿಯಲ್ಲಿ ಯೋಗ್ಯವಾಗಿವೆಯೋ ಅವುಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಈ ಬಾರಿ ಇ -ಲೋಕ ಅದಾಲತ್ನಲ್ಲಿ ವಿಲೇವಾರಿ ಮಾಡಲು 5,925 ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ಇದೊಂದು ಹೊಸ ಪ್ರಯತ್ನ, ಈಗಾಗಲೇ ತಾಲ್ಲೂಕು ನ್ಯಾಯಾಧೀಶರು, ವಕೀಲರು ವಿಮಾ ಸಂಸ್ಥೆಗಳ ಗಮನಕ್ಕೆ ತರಲಾಗಿದ್ದು ಆದಷ್ಟು ಹೆಚ್ಚು ಪ್ರಕರಣ ಇತ್ಯರ್ಥ ಮಾಡಲಾಗುವುದು. ಇದರಿಂದ ಕಕ್ಷಿದಾರರು, ವಕೀಲರು, ವಿಮಾ ಸಂಸ್ಥೆಗಳು, ಬ್ಯಾಂಕುಗಳಿಗೂ ಅನುಕೂಲ ಆಗಲಿದೆ ಎಂದು ನಾ|| ಶಿವಣ್ಣ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ. ಬಸವರಾಜು ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
**************
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info