ನಮ್ಮ ಪರಂಪರೆಯ ಭಾಗವೇ ನಮ್ಮ ಆಚರಣೆಯಾಗಲಿ..
ಡ್ಯಾನಿ ಪಿರೇರಾ
#ಡ್ಯಾನಿ ಪಿರೇರಾ-ಕಾಲಂ
ನಾನು ಮೂಲತಃ religious ಅಲ್ಲ, ನನ್ನ ದೇಶದ ಧಾರ್ಮಿಕ ಪರಂಪರೆಯ ಬಗ್ಗೆ ಮಾತ್ರ ಗೌರವ ಹೊಂದಿರುವವನು. ಹಾಗಾಗಿ ಎಲ್ಲರ ನಂಬಿಕೆಯ ಬಗ್ಗೆ ಗೌರವ ಭಾವವಿದೆ. ವಿಷಯ ಇಷ್ಟೇ. ಪಾಶ್ಚಾತ್ಯ ಮಾನಸೀಕತೆಯ ಹೊಸವರ್ಷದ ಮೊದಲ ದಿನ ಮುಕ್ತಾಯಗೊಂಡಿದೆ. ವಾಸ್ತವವಾಗಿ ಇದು ಕ್ರೈಸ್ತವರ್ಷಾಚರಣೆ ಕ್ಯಾಲೆಂಡರ್ ಬದಲಾಗುತ್ತದೆ ಮತ್ತೇನಲ್ಲ.
ಇರಲಿ, ಡಿಸೆಂಬರ್ 31 ರ ಆ ರಾತ್ರಿ ಆ ಮತಾನುಯಾಯಿಗಳು ಚರ್ಚ್ ಗೆ ತೆರಳುತ್ತಾರೆ ಅವರು ನಂಬಿದ ಕ್ರಿಸ್ತನ ಆರಾಧನೆ ಮಾಡುತ್ತಾರೆ. ಸಾಧ್ಯವಾದರೆ ಚರ್ಚ್ ನಲ್ಲಿ ಕೇಕ್ ಹಂಚಿ ತಿಂದು ಸಂಭ್ರಮಿಸಿ, ವಾಪಸ್ ಮನೆಗೆ ಬಂದು ಬಹುತೇಕ ಜನ ತೆಪ್ಪಗೆ ಮಲಗುತ್ತಾರೆ. ಅಲ್ಲಿಗೆ ಅವರ ಹೊಸ ವರ್ಷಾಚರಣೆ ಅವರು ನಂಬಿದ ದೈವದ ಆರಾಧನೆಯ ಮೂಲಕ ಮುಕ್ತಾಯವಾಗುತ್ತದೆ. ಆದರೆ ಸಮಸ್ಯೆ ಇರುವುದು ಹಿಂದುಗಳಲ್ಲಿ. ಅವರಿಗೆ ಯಾವ ಆ್ಯಂಗಲ್ ನಲ್ಲೂ ಸಂಬಂಧಿಸದ ಆಚರಣೆಯನ್ನು ಊರ ಹಬ್ಬದಂತೆ ಆಚರಿಸಲು ನಿಲ್ಲುತ್ತಾರೆ.
ಅದೊಂದು ಗೌರಿ ಗಣೇಶ,ಯುಗಾದಿ, ದೀಪಾವಳಿಯ ಭಕ್ತಿ ಶ್ರದ್ಧೆಯ ಭಾಗವಾಗಿದ್ದರೆ, ಅದೊಂದು ಅತ್ಯಂತ ಸಂಭ್ರಮದ ವಿಚಾರ ಎನ್ನಬಹುದಿತ್ತು. ಈಗದು fashion ಎನ್ನುವ ರೀತಿಯಲ್ಲಿ ಮನೆಯ ಹಬ್ಬದಂತೆ ಆಗಿದೆ. ಮನೆಯಲ್ಲಿ ಆಗತಾನೆ ಮದುವೆಯಾಗಿ ಬಂದ ಗೃಹಿಣಿಯಾದಿಯಾಗಿ ಹಲ್ಲು ಉದುರಲು ಸಿದ್ಧವಾಗಿರುವ ಗೃಹಸ್ಥ-ಗೃಹಿಣಿಯರು ಹೊಸ ವರ್ಷದ ಸಂಭ್ರಮದಲ್ಲಿ ತೇಲಲು ಆ ದಿನಕ್ಕಾಗಿ ಕಾಯುತ್ತಾರೆ. ಕೆಲವರಿಗೆ ಶುಭಾಶಯ ಹೇಳುವ ತವಕ. ಅದಕ್ಕಾಗಿ ಮಧ್ಯರಾತ್ರಿಗೆ ಕಾಯುತ್ತಿರುವವರು ಅದೆಷ್ಟೋ! ಶುಭಾಶಯ ಹೇಳುವ ಧಾವಂತದಲ್ಲಿ ಅದರ ಕಾಗುಣಿತವನ್ನು ಮರೆತು ಅಥವಾ ತಿಳಿಯದೆ ಹಾರ್ಧಿಕ- ಆರ್ಥಿಕ - ಆರ್ಧಿಕ ಹೀಗೆಲ್ಲಾ ಬರೆದು ಶುಭಾಶಯಗಳನ್ನು ಕಳಿಸುತ್ತಾರೆ.
ಮನೆಯಲ್ಲಾದರೆ ಕೇಕ್ - ಜ್ಯೂಸ್ ಸಮಾರಾಧನೆ, ಹೊರಗಡೆಯಾದರೆ ಎಲ್ಲವನ್ನೂ ಒಳಗೊಂಡ ಪಾರ್ಟಿ. ಜತೆಗೆ ಕೂಗಾಟ ಕಿರುಚಾಟ ಕೇಕೆ ಇತ್ಯಾದಿ ಇತ್ಯಾದಿ . ಪ್ರಶ್ನೆ ಅದಲ್ಲ, ತಿಳಿದೋ ತಿಳಿಯದೋ ಮಕ್ಕಳನ್ನು ಹಾದಿ ತಪ್ಪಿಸುವ ಈ ಪಾರ್ಟಿಗಳ ಅಡಿಗಲ್ಲು ಮನೆಯಿಂದಲೇ ಆರಂಭಗೊಳ್ಳುತ್ತದೆ ಅದೂ ಮನೆಯಲ್ಲಿ ಉತ್ತಮ ಸಂಸ್ಕಾರ ಕೊಡಬೇಕಾದ ತಂದೆ-ತಾಯಂದಿರ ಕಡೆಯಿಂದಲೇ! ಒಮ್ಮೆ ಯೋಚಿಸಿ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕೂಡಿಸಿಕೊಂಡು ನಡೆಯುವ ಈ ಮಧ್ಯರಾತ್ರಿಯ ಕೇಕ್- ಜೂಸ್ ಪಾರ್ಟಿ ಆ ಮಕ್ಕಳು ಬೆಳೆ ಬೆಳೆದಂತೆ ಅವರ ಮಾನಸಿಕ ಅಪೇಕ್ಷೆ ದೈಹಿಕ ವಾಂಛೆ ಹೊಸಹೊಸದನ್ನು ಬಯಸುವಂತೆ ಅವರ ಮನಸ್ಸನ್ನು ಉದ್ದೀಪಿಸುವುದರಲ್ಲಿ ಆಶ್ಚರ್ಯವೇನಿದೆ?!
ಮನೆಯಲ್ಲಿ ನಡೆಯುವ ಈ ಪಾರ್ಟಿ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಶರೀರ- ಮನಸ್ಸು ಹೊಸ ಖುಷಿಯನ್ನು ಬಯಸುತ್ತದೆ. ಆ ಖುಷಿಗೆ ಮನೆಯ ವಾತಾವರಣ ರುಚಿಸದೇ ಹೋದಾಗ ಆ ಮಕ್ಕಳು ತನ್ನ ಸಮಾನ ವಯಸ್ಕ ಮತ್ತು ಮನಸ್ಕರನ್ನು ಸೇರಿ ಅವರೊಂದಿಗೆ ಮೋಜು ಹಂಚಿಕೊಳ್ಳಲು ಬಯಸುತ್ತದೆಯಲ್ಲವೇ?! ಮನೆಯ ಪರಿಸರದಿಂದ ಹೊರ ಬಂದು ಸ್ವಚ್ಛಂದ ವಾತಾವರಣದಲ್ಲಿ ಗುಂಡು ತುಂಡು ಪಾರ್ಟಿಯಲ್ಲಿ ಒಂದಾಗಬೇಕು ಎಂದು ಬಯಸಿದರೆ ಅದರ ಅಡಿಪಾಯ ಮನೆಯಲ್ಲೇ ಶುರವಾಗಿದೆ ಎಂದರ್ಥವಲ್ಲವೇ?
ಈ ಹಿಂದೆ ಮನೆಯಲ್ಲಿ ಪೋಷಕರು ಕೊಟ್ಟ ಕೇಕ್-ಜ್ಯೂಸ್ ಇಲ್ಲಿಯೂ ಇರಬೇಕು ಎಂಬ ನಿರ್ಬಂಧ ಎಲ್ಲಿದೆ?!
ಒಂದಷ್ಟು ಬಲಿತಾಗ ತುಟಿಯ ಮೇಲೆ ಮೀಸೆ ಪುಟಿಯಲು ಶುರುವಾದಾಗ ಅಥವಾ ಅದಕ್ಕೂ ಮೊದಲು ಮನೆಯ ಕೊಟ್ಟ ಜೂಸ್ ಕತ್ತರಿಸಿ ಹಂಚಿದ ಕೇಕ್ ಅದೇಕೋ ರುಚಿಸದಾಗುತ್ತದೆ. ಆ ಜ್ಯೂಸ್ ನಾಲಿಗೆ ಜುಂ ಗುಡಿಸುವುದೇನೋ ಸತ್ಯ ಆದರೆ ವಯಸ್ಸಿಗೆ ಮುದಕೊಡಬೇಕೆನಿಸುವ ಕಿಕ್ ಕೊಡುತ್ತಿಲ್ಲವಲ್ಲ ಎನ್ನುವ ಒಂದು ಸಣ್ಣ ಅಸಮಾಧಾನ ಆ ಮೀಸೆ ಪುಟಿಯುವ ಹುಡುಗನಲ್ಲಿ ಬರದಿರಲು ಹೇಗೆ ಸಾಧ್ಯ?! ಜೊತೆಗಾರರ ಒತ್ತಾಸೆ ಇದ್ದಾಗ ತಡೆಯುವುದೇಗೆ?!
ಆಗ ಮನೆಯ ಪೋಷಕರೊಂದಿಗೆ ಆ ಕೇಕ್-ಜ್ಯೂಸ್ ಪಾರ್ಟಿ ಗೆ ಸೀಮಿತಿವಾಗುಳಿಯಲು ಸಾಧ್ಯವೇ?! ಸೊಂಟ ಕೈ ಕಾಲು ಬಲವಾದಾಗ ಮಗು ಹೊಸ್ತಿಲು ದಾಟುವುದಿಲ್ಲವೇ?!
ಸಹಜವಾಗಿ ಹೊಸದನ್ನು ಹೊಂದಲು, ಬಯಸ್ಸಿದ್ದನ್ನು ಪಡೆಯಲು ಮಕ್ಕಳು ಮಗ / ಮಗಳು ಹೊಸ್ತಿಲು ದಾಟುತ್ತಾರೆ. ಅಲ್ಲಿ ಅವರಿಗೆ ಅವರ ವಯಸ್ಸಿಗೆ ಮನಸ್ಸಿಗೆ ಸಂತೋಷ ಸಿಗುವ ಪಾನ - ಖಾನದ ಅಭ್ಯಾಸ ಶುರುವಾಗುತ್ತದೆ. ಮನೆಯ ಆಹಾರ ಪದ್ಧತಿ , ಸಂಪ್ರದಾಯ, ಆಚರಣೆ ಸಂಸ್ಕಾರ, ಪಾಶ್ಚತ್ಯ ಜಗತ್ತಿನ ಮೋಜು ಮಸ್ತಿಯ ಹೊಸ ಆಚರಣೆಗಳ ಆಕರ್ಷಣೆಯ ಮುಂದೆ ಕೊಚ್ಚಿ ಹೋಗುತ್ತದೆ.
ಮನೆಯಲ್ಲಿ ನಮ್ಮ ಸಂಪ್ರದಾಯದ ಭಾಗವಾಗಿರದ ಹೊಸ ವರ್ಷದ ಈ ಕೇಕ್ - ಜ್ಯೂಸ್ ಪಾರ್ಟಿಗಳ ಹೊಸ ಸಂಪ್ರದಾಯಗಳು ನಮ್ಮ ಮನೆಯ ಮಕ್ಕಳನ್ನು ಹಾದಿ ತಪ್ಪಿಸುತ್ತವೆ. ಎಷ್ಟದ್ರೂ ನಾವೇ ಹೇಳಿದ್ದೇವಲ್ಲ, ಮನೆಯೇ ತಾನೆ ಮೊದಲ ಶಾಲೆ, ಜನನಿ ತಾನೆ ಮೊದಲ ಗುರು!
ಮನೆಯಲ್ಲಿ ಕಲಿಸಿದ ಇಂಥ ಆಚರಣೆಗಳು ಮಕ್ಕಳ ಮನಸ್ಸನ್ನು ಅದೆಷ್ಟು ಉನ್ಮತ್ತಗೊಳಿಸುತ್ತವೆ ಎನ್ನುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅದರ ಕೆಟ್ಟ ಪರಿಣಾಮವನ್ನು ಗಮನಿಸಿದ್ದೇನೆ. ಮಕ್ಕಳು ದುಶ್ಚಟದ ದಾಸರಾಗಿರುವುದನ್ನು ಕಂಡು ಸಂಕಟಪಡುವ ಪೋಷಕರನ್ನು ಕಂಡಿದ್ದೇನೆ.
ಹೊಸ ವರ್ಷದ ಒಂದು ಸಣ್ಣ ಸಂಭ್ರಮಾಚರಣೆಯನ್ನು ವಿರೋಧಿಸುವುದು ಮತ್ತು ವಿರೋಧಿಸುವವರ ವಿಚಾರ ಕೆಲವೊಮ್ಮೆ ಕ್ಷುಲ್ಲಕವೆನಿಸಿದರೂ ಅವುಗಳನ್ನೂ ವಿವಾದ ಮಾಡಬೇಕೆ ಎಂದೆನಿಸಿದರೂ ಮನೆಯಲ್ಲಿನ ಇಂಥ ಆಚರಣೆಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದಂತೂ ಸತ್ಯ!
ಶಾಖಾಹಾರಿ ಸಂಪ್ರದಾಯಗಳ ಮನೆಗಳ ಪೋಷಕರು ಮದ್ಯಪಾನ, ಮಾಂಸಹಾರದ ಅಭ್ಯಾಸ ಕಲಿಸದಿರಬಹುದು. ಪಾರ್ಟಿಗೆಂದು ನೀವು ಕುಡಿಸಿದ ಜ್ಯೂಸ್, ಕತ್ತರಿಸಿ ತಿನ್ನಲು ನೀವು ತಂದ ಕೇಕ್ ಇವುಗಳ ಜೊತೆಗೆ ಮತ್ತಷ್ಟು ಸೇರಿಗೊಳ್ಳದಿದ್ದರೆ ಏನೋ ಕೊರತೆ ಬಾಧಿಸಿದಂತೆ!
ಆ ವಯಸ್ಸು ಮತ್ತು ನಾಲಿಗೆಯ ರುಚಿಯೇ ಹಾಗೆ ಹೊಸದನ್ನು ಬಯಸುತ್ತದೆ!
ಸೇರುವ ಪಾರ್ಟಿಗಳಿಗೆ ಗೊತ್ತಿರದಂತೆ ಹೊಸ ಹೊಸ ಗೆಳೆಯರು ಸೇರಿಕೊಳ್ಳುತ್ತಾರೆ ಯೌವನದ ಮದ ಗೆಳತಿಯರೂ ಕೂಡಿಕೊಳ್ಳುತ್ತಾರೆ. ಇಂಥ ಮೋಜು ಮಸ್ತಿಗಳಿಗೆ ಹೆಣ್ಣು ಗಂಡೆಂಬ ಭೇದವನ್ನು ಮರೆಸುವಷ್ಟು ಶಕ್ತಿ ಖಂಡಿತವಿದೆ. ಮಕ್ಕಳಿಗೆ ನಮ್ಮ ಸಂಪ್ರದಾಯದ ಭಾಗವಲ್ಲದ ಸಂಗತಿಗಳನ್ನು ಕಲಿಸುವುದರಿಂದ ನಮ್ಮ ಮಕ್ಕಳು ಬೆಳೆಬೆಳೆದಂತೆ ದುಶ್ಚಟಗಳಿಗೆ ಅನೈತಿಕ ಕೃತ್ಯಗಳಿಗೆ ತೊಡಗುವ ಅಪಾಯವಿದೆ.
ಕಲಿಸುವ ಸಂಗತಿಗಳು ನಮ್ಮ ಸಂಸ್ಕೃತಿಗಳಿಗೆ ಅದಕ್ಕೂ ಹೆಚ್ಚಾಗಿ ನಮ್ಮ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ನಮ್ಮ ಆಚಾರ ವಿಚಾರಗಳು ಪೂರಕವಾಗಿವೆಯೇ ಎಂದು ಒಮ್ಮೆ ಪರಿಶೀಲಿಸಿ ನಡೆಯುವ ಅವಶ್ಯಕತೆಯಂತೂ ಖಂಡಿತವಿದೆ.ಆ ಶಿಕ್ಷಣ ಮನೆ ಮತ್ತು ಶಾಲೆಯಲ್ಲಿ ಪುನರಾರಂಭಿಸುವ ಅವಶ್ಯಕತೆ ಇದೆ.
ಈ ಕಾರಣಕ್ಕಾಗಿಯೇ ನಾನು ಒಂದು ಶುಭಾಶಯದ ಸಂದೇಶವನ್ನು ಯಾರಿಗೂ ಕಳಿಸುವುದಿಲ್ಲ. ಅದು ಶಾಲೆಯಲ್ಲಿರಬಹುದು, ನನ್ನ ವೈಯಕ್ತಿಕ ಜೀವನದಲ್ಲಿರಬಹುದು ಮತ್ತು ಸಾಮಾಜಿಕ ಜೀವನದಲ್ಲಿ ಇಂಥ ಆಚರಣೆಗಳ ಸಂಭ್ರಮದಿಂದ ದೂರವಿರಲು ಸಂಕಲ್ಪಿತನಾಗಿದ್ದೇನೆ. ಏನೋ ಸುಧಾರಣೆಮಾಡುತ್ತೇನೆಂಬ ಭ್ರಮೆ ಇಲ್ಲ. ಆದರೆ, ನನ್ನ ವಿದ್ಯಾರ್ಥಿಗಳು ನನ್ನ ದೇಶದ ಆಸ್ತಿ . ಈ ವಿಚಾರಗಳ ಬಗ್ಗೆ ನನಗೆ ಬದ್ಧತೆ ಇದೆ. ಈ ಹಿನ್ನೆಲೆಯಲ್ಲಿ ನನ್ನ ಸಂಸ್ಕಾರ ಕೇಂದ್ರ ನನ್ನನ್ನು ದೃಢಗೊಳಿಸಿದೆ. ಹಾಗಾಗಿ ಅವರನ್ನು ದಾರಿ ತಪ್ಪಿಸುವ ಆಲೋಚನೆ ಖಂಡಿತ ಮಾಡಲಾರೆ. ಅದಕ್ಕೂ ಹೆಚ್ಚಾಗಿ ನನಗೆ ಒಳ್ಳೆಯದಲ್ಲ ಎಂದಾದರೆ ಬೇರೆಯವರಿಗೂ ಅದು ಹೇಗೆ ಒಳ್ಳೆಯದು?!
ಕೆಲವೊಮ್ಮೆ ನಾನು ಹೇಳಿದನ್ನು ವಿಧೇಯರಂತೆ ಕೇಳಿಸಿಕೊಂಡು ಅವರಿಗನಿಸಿದಂತೆ ಇರುವ ವಿದ್ಯಾರ್ಥಿಗಳೂ ಇಲ್ಲದ್ದಿಲ್ಲ! ಆದರೆ, ನನಗೊಂದು ಸತ್ಯದ ಅರಿವಿದೆ. ಅದೆಂದರೆ-ಅಧ್ಯಾಪಕ ತನ್ನ ವಿದ್ಯಾರ್ಥಿಗಳನ್ನು ಪ್ರೇರೇಪಿಸಬಹುದು ಒಂದು ಶ್ರೇಷ್ಠ ಗುರಿಯ ಸಾಧನೆಗೆ ಅವರನ್ನು ಉದ್ದೀಪಿಸಬಹುದು. ಆದರೆ, ಅವರನ್ನು ಉಪ್ಪಿನ ಮೂಟೆಯಂತೆ ಹೊತ್ತು ಗುರಿ ಸಾಧನೆಯ ಕೊನೆಯನ್ನು ಮುಟ್ಟಿಸಲಾಗದು. ಸ್ವತಃ ಅವರೇ ಅದನ್ನು ಮಾಡಬೇಕು. ಹಾಗಾಗಿ ಒಳ್ಳೆಯದನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು.ಇದು ನನಗೂ ಅನ್ವಯವಾಗುತ್ತದೆ. ಉದ್ದೇಶ ಬದಲಾದರೆ ಯಾರಿಗೂ ಒಳಿತಾಗುವುದಿಲ್ಲ. ಹಾಗಾದಾಗ ಒಟ್ಟು ದುಷ್ಪರಿಣಾಮ ಇಡೀ ವ್ಯವಸ್ಥೆಯ ಮೇಲಾಗುತ್ತದೆ. ಕೊನೆಗೆ ನಮ್ಮ ಮಕ್ಕಳನ್ನು ನಾವೇ ದೂರುವ ಮತ್ತು ಅವರು ದಾರಿ ತಪ್ಪಿದ್ದಾರೆ ಎಂದು ಹೇಳಿಕೊಂಡು ಸಂಕಟ ಪಡುವ ಪರಿಸ್ಥಿತಿ ನಮ್ಮದಾಗುತ್ತದೆ.
ಪ್ರಧಾನ ಸಂಪಾದಕರು:- ಹರೀಶ್ ಹೆಚ್ ಆರ್
ಕೋಟೆ
ಸುದ್ದಿ ಸಂಪಾದಕರು:-
ನಾಗೇಂದ್ರ ಹೆಚ್ ಎನ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info